ಬಿ.ಕೆ.ಎಸ್.ವರ್ಮಾ
- ಲೇಖನ
- ಚರ್ಚೆ
ಬಿ.ಕೆ.ಎಸ್ ವರ್ಮ (ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ) (೧೯೪೯ - ೦೬ ಫೆಬ್ರುವರಿ, ೨೦೨೩) ಕರ್ನಾಟಕದ ಮುಖ್ಯ ಚಿತ್ರ ಕಲಾವಿದ. ಕನ್ನಡ ತಾಯಿ ಭುವನೇಶ್ವರಿ, ರಾಘವೇಂದ್ರ ಯತಿ, ಗಣಪತಿ - ಇವರು ಚಿತ್ರಿಸಿದ ಪ್ರಮುಖ ಚಿತ್ರಗಳು. ಒಮ್ಮೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಇರುವ ರಾಜಾ ರವಿವರ್ಮ ಅವರ ಚಿತ್ರಗಳನ್ನು ನೋಡಿ ಪ್ರೇರಣೆ ಪಡೆದು, ತಾನೂ ಅವರಂತೆ ಆಗಬೇಕೆಂದು ವರ್ಮ ಎಂಬ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡು, ಹೆಸರನ್ನು ಬಿಕೆಎಸ್ ವರ್ಮಾ ಎಂದು ಬದಲಿಸಿಕೊಂಡರು.
ಒಮ್ಮೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮಾ ರವರ ಪೇಂಟಿಂಗ್ ಗಳನ್ನು ವೀಕ್ಷಿಸುತ್ತಿದ್ದಾಗ ತನ್ಮಯರಾಗಿ ವರ್ಮಾ ಎಂಬ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡನಂತರ ಅವರ ಜೀವನದ ದಿಶೆಯೇ ಬದಲಾಯಿತಂತೆ. ಆ ದಿನಗಳಲ್ಲಿ ಬ್ಲೇಡಿನಿಂದ, ಉಗುರಿನಿಂದ, ಎಂಬಾಸಿಂಗ್, ಥ್ರೇಡ್ ಪೇಂಟಿಂಗ್ ಮಾಡಿ ಹಣಗಳಿಸಿದ್ದರು.ತಮ್ಮ ಎರಡೂ ಕೈಗಳ ಬೆರೆಳುಗಳನ್ನೆ ಉಪಯೋಗಿಸಿ ಸುಂದರವಾದ ಚಿತ್ತಾರಗಳನ್ನು ಮೂಡಿಸಿವ ಪರಿ ಅನನ್ಯ. ಅವರು ಬಿಡಿಸಿದ 'ಓಂಗಣೇಶ ಚಿತ್ತಾರ' ಜನರ ಆಸಕ್ತಿಯನ್ನು ಕೆರಳಿಸಿತು. ಎರಡೆ ನಿಮಿಷಗಳಲ್ಲಿ ಸುಂದರವಾದ ಚಿತ್ರಕಲೆಯನ್ನು ಬಿಡಿಸುವ ಕಲೆಯನ್ನು ಮೆಚ್ಚಿ ಸ್ವಾಗತಿಸಿದ ಕಲಾವಿದರಲ್ಲಿ ಮುಖ್ಯರು,ಸೂಪರ್ ಸ್ಟಾರ್ ರಜನಿಕಾಂತ್, ಮೇರುನಟ ಡಾ. ರಾಜ್ ಕುಮಾರ್,ಅಂತಾರಾಷ್ಟ್ರೀಯ ಸುಪ್ರಸಿದ್ಧ ಕಲಾವಿದ ಡಾ.ರೋರಿಕ್, ಮತ್ತು ದೇವಿಕಾರಾಣಿ ದಂಪತಿಗಳು. ಕೇವಲ ೨ ನಿಮಿಷಗಳಲ್ಲೇ ಸೃಷ್ಟಿಸುವ ಸಾಮರ್ಥ್ಯದ ಸಾವಿರಾರು ಚಿತ್ರಗಳು ವರ್ಮಾರವರ ಚಿತ್ತಾರ ಲೋಕದ ಅನರ್ಘ್ಯ ರತ್ನಗಳಂತೆ ರಸಿಕರ ಮನಸ್ಸನ್ನು ರಂಜಿಸಿವೆ. ನಿರಂತರವಾಗಿ ಈ ಕಲೆಯಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಾ ಅವಿರತವಾಗಿ ಶ್ರಮಿಸುತ್ತಿರುವ ವರ್ಮಾರವರು ಕನ್ನಡಿಗರು.ಬೆಂಗಳೂರಿನ ರಾಮಾಂಜನೇಯ ಗುಡ್ಡದ ಸೃಷ್ಟಿಯ ಹಿಂದೆ ಶ್ರೀನಿವಾಸ್ ರವರ ಕಲ್ಪನಾಶಕ್ತಿ ಅಡಗಿತ್ತು.
ತಾಯಿ ಡಾ.ಜಯಲಕ್ಷ್ಮಮ್ಮಆಯುರ್ವೇದ ಡಾಕ್ಟರ್, ತಂದೆ ಸಂಗೀತ ಶಾಸ್ತ್ರಜ್ಞ ಪಂ.ಕೃಷ್ಣಚಾರ್. ವಿದ್ಯಾಭ್ಯಾಸ ಕೇವಲ ೨ ನೆಯ ತರಗತಿಯವರೆಗೆ ಮಾತ್ರ. ಚಿಕ್ಕಂದಿನಲ್ಲೇ ಹಟವಾದಿಯಾಗಿ ತಾವು ಹಿಡಿದ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುವ ಗುಣಹೊಂದಿದ್ದ ಶ್ರೀನಿವಾಸ್ ರವರು,ಎ.ಎನ್.ಸುಬ್ಬರಾವ್ ಕಲಾಮಂದಿರದಲ್ಲಿ ತಮ್ಮ ಚಿತ್ರಕಲಾಭ್ಯಾಸ ಮಾಡಿದರು. ಕೆಲಕಾಲ ಪತ್ರಿಕೆಗಳಲ್ಲಿ 'ಆರ್ಟಿಸ್ಟ್' ಆಗಿ ದುಡಿದರು. ಮೈಸೂರು ಮಹಾರಾಜರ ಭಾವಚಿತ್ರವನ್ನು ೨ ನಿಮಿಷಗಳಲ್ಲಿ ಬರೆದ ಅವರನ್ನು ಅರಸರು ಅಭಿನಂದಿಸಿದರು.
ಶ್ರೀ ಶತಾವಧಾನಿ ಗಣೇಶ್, ಮತ್ತು ಶರ್ಮಾರವರು ಒಟ್ಟಾರೆ ಸೇರಿ, ಸಾವಿರಕ್ಕೂ ಹೆಚ್ಚು ಕಾವ್ಯ-ಚಿತ್ರಗಳನ್ನು ಬಿಡಿಸಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ವಿಜ್ಞಾನದ ಬಗ್ಗೆ ಅಪಾರ ಗೌರವ ಹಾಗೂ ಅಪಾರ ಜ್ಞಾನ ಹೊಂದಿರುವ ಬಿ.ಕೆ.ಎಸ್.ವರ್ಮಾರವರು, ಸೌರ ಚಕ್ರದ ಸೃಷ್ಟಿಮಾಡುವ ಆಸೆ ಅವರಿಗೆ ಪ್ರಬಲವಾಗಿದೆ. (Elements) ಐದು ಕಣಗಳಿಂದ ಸೃಷ್ಟಿಸಿ,(ಬಗೆಬಗೆಯ ಸೌರ ಚಿತ್ರಗಳನ್ನು ಚಿತ್ತಾರದ ರೂಪದಲ್ಲಿ ಮೂಡಿಸುವ ಹೆಬ್ಬಯಕೆ ಅವರಿಗಿದೆ. ಇದು ಆತ್ಮದ ಚಿತ್ರಣ ಹಾಗೂ ಸೌರವ್ಯೂಹದ ಸಮ್ಮಿಳನವೆಂದು ಶ್ರೀನಿವಾಸ್ ನಂಬುತ್ತಾರೆ.ಯಾವುದೇ ವರ್ಣಚಿತ್ರ ಜನಸಾಮಾನ್ಯರನ್ನು 'ರೀಚ್' ಆದಲ್ಲಿ ಸೃಷ್ಟಿಸಿದ ಕಲಾವಿದ 'ರಿಚ್ ಮ್ಯಾನ್' ಆದಂತೆ ಎನ್ನುವ ಮನೋಭಾವವನ್ನಿಟ್ಟುಕೊಂಡು ಚಿತ್ತಾರ ಲೋಕದಲ್ಲಿ ಹಲವಾರು ಹೊಸಹೊಸ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.ಪ್ರಕೃತಿಯನ್ನು ಅತೀವವಾಗಿ ಪ್ರೀತಿಸುವ ವರ್ಮಾ, ರಚಿಸುವ ಪ್ರತಿಕೃತಿಯಲ್ಲೂ ನಾವು ಅವರ ಚಿಂತನಗಳನ್ನು ಸ್ಪಷ್ಟವಾಗಿ ಕಾಣಬಹುದು.
"ಇದ್ದದ್ದು ಇದ್ದಹಾಗಿ ಬರೆಯೋದು Chart, ಅನುಭವಿಸಿ ಬರೆಯೋದು Art" ಎನ್ನುವುದು ವರ್ಮಾರವರ ಜೀವನದ ಸಿದ್ಧಾಂತ" ತಮ್ಮ ಜೀವನದುದ್ದಕ್ಕೂ ಈ ಮೂಲ್ಯಗಳಿಗೆ ಧಕ್ಕೆಬರದಂತೆ ತಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.
ಹೀಗೆ ಅಂತಾರಾಷ್ಟ್ರೀಯ ವಲಯದಲ್ಲಿ ಅತ್ಯಂತ ಮೇರುವ್ಯಕ್ತಿಯಾಗಿ ಬೆಳೆದಿರುವ, ಬಿ.ಕೆ.ಎಸ್.ವರ್ಮಾರವರು, ಇತ್ತೀಚೆಗೆ ಒಬ್ಬ ಸಮರ್ಥ ಕವಿಯಾಗಿಯೂ ಕಾಣಿಸಿಕೊಂಡಿದ್ದಾರೆ. ತಮ್ಮ ಚಿತ್ತಾರಗಳ ಸೃಷ್ಟಿಲೋಕದಿಂದ ಸ್ವಲ್ಪಹೊರಗೆ ಬಂದಾಗ, ಅವರು ವಿಹರಿಸುವುದು, ಒಬ್ಬ ಕವಿಯಾಗಿ. ಮಕ್ಕಳಮುಂದೆ ಮನದಣಿಯೆ ಹಾಡುತ್ತಾರೆ. ಅವರ ಚಪ್ಪಾಳೆಗಳ ಶಬ್ದದಲ್ಲಿ ಅವರು ತಮ್ಮನ್ನು ಸಂಪೂರ್ಣವಾಗಿ ಮರೆಯುತ್ತಾರೆ.
ಇವರು ೬/೦೨/೨೦೨೩ ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಇವರಿಗೆ ೭೪ ವರ್ಷ ವಯಸ್ಸಾಗಿತ್ತು.[೧]