ನಾರ್ಮನ್ ಬೊರ್ಲಾಗ್ (ಮಾರ್ಚ್ ೨೫,೧೯೧೪ – ಸೆಪ್ಟೆಂಬರ್ ೧೨,೨೦೦೯) ಅಮೆರಿಕದ ಜೀವಶಾಸ್ತ್ರಜ್ಞ. ಇವರು ಒಬ್ಬ ಮಹಾನ್ ಮಾನವತಾವಾದಿ.ಇವರನ್ನು "ಹಸಿರುಕ್ರಾಂತಿ ಯ ಪಿತಾಮಹ","ಕೃಷಿಯ ಅತ್ಯಂತ ಮೇಧಾವಿ ವಕ್ತಾರ" "ಮಿಲಿಯಗಟ್ಟಲೆ ಜನರ ಪ್ರಾಣ ಉಳಿಸಿದ ಮಹಾನುಭಾವ" ಎಂದೂ ಕರೆಯಲಾಗುತ್ತಿತ್ತು. ಇವರಿಗೆ ಜಗತ್ತಿನ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ನೊಬೆಲ್ ಶಾಂತಿ ಪುರಸ್ಕಾರ, ಭಾರತದಲ್ಲಿ ಹಸಿರುಕ್ರಾಂತಿಗಾಗಿ ಇವರ ಕೊಡುಗೆಗೆ ಪದ್ಮ ವಿಭೂಷಣ ದೊರೆತಿದೆ.
ಹಸಿರುಕ್ರಾಂತಿಯ ಹರಿಕಾರ
ಜಗತ್ತಿನ ಹಸಿವು ನೀಗಿಸುವ ಆಹಾರ ದಾನ್ಯಗಳ ಮುಖ್ಯವಾಗಿ ಗೋಧಿಯ ಉತ್ಪಾದನೆಯ ಹೆಚ್ಚಳದಲ್ಲಿ ನಾರ್ಮನ್ ಬೊರ್ಲಾಗ್ರವರ ಸಂಶೋಧನೆ ಕ್ರಾಂತಿಯನ್ನೆ ಉಂಟುಮಾಡಿದೆ. ಮೆಕ್ಸಿಕೋ, ಭಾರತ ಹಾಗೂ ಪಾಕಿಸ್ತಾನಗಳಲ್ಲಿ ಇವರ ಸಂಶೋಧನೆಯ ಫಲವಾಗಿ ಉತ್ಪಾದನೆಯು ಸುಮಾರು ಮೂರುಪಟ್ಟಿಗಿಂತಲೂ ಹೆಚ್ಚಾಯಿತು. ಇದರಿಂದಾಗಿ ಈ ಪ್ರದೇಶಗಳು ಆಹಾರ ಸ್ವಾವಲಂಬಿಗಳಾಗಲು ಸಹಕಾರಿಯಾಯಿತು.